ಸಾಕು ಮಾಡೋಣ

ಪುರಾಣ ಪುಣ್ಯಕಥೆಗಳ ಮಿಥ್ಯಾಲಾಪಗಳು ಇನ್ನು ಸಾಕು
ಮುಗಿಲ ಮಲ್ಲಿಗೆಗಳ ಮೂಸುವ ಭ್ರಮೆ ಇನ್ನು ಸಾಕು,
ಕಾಣದುದರ ಕೈಕಾಲುಗಳಿಗೆ ಜೋತಾಡಿ
ಕರ್ರಗೆ ಕಲೆಕಲೆ ಮಾಡಿದ್ದ ಕಂತೆಗಳು ಇನ್ನು ಸಾಕು

ಇದೋ ನೋಡಿ ನಿಮ್ಮ ಮುಂದಿರುವುದು
ಪುಣ್ಯ ಗಣ್ಯ ಭೂಮಿ ಭಾರತವಲ್ಲ
ಹಂದೆಗಳ ಹಡೆಯುವ ದಾರಿದ್ರ್ಯ ದಳ್ಳುರಿಯ
ಆತ್ಮಘಾತಕತನದ ಗಟಾರಮತಿಗಳ ಒಣನೆಲವಾಗಿದೆ.
ನಾವೀಗ ನಿಜವನರಿಯದ ಕೂಪಮಂಡೂಕಗಳು
ಹಲವು ಹಲ್ಕಟ್ತನಗಳ ಮುಚ್ಚಿ ಆದರ್ಶ ಹಾಡುವವರು,
ಸಂಪನ್ನ ರಾಮರೊಳಗೆ ಹುದುಗಿರುವ ರಾವಣರು,
ಪತಿವ್ರತಾ ಮೇಕಪ್ಪಿನೊಳಗೆ ಮಿಡುಕುವ ಪತಿತೆಯರು,

ಜಗವನ್ನೇ ಬೆಳಗುವ ರವಿಕಿರಣಗಳು
ಈ ಒಣಕಾಡಿನೆಲೆಗಳಿಗೂ ಸೋಕವು
ನೆಲವ ಬೆಳಗುವುದನ್ನಂತು ಕೇಳಬೇಡ
ಇಲ್ಲಿಯ ಕಾಗೆ ಗೂಗೆಗಳಿಗೆ ಹೊಸಪಾಠ ಕಲಿಸಿದರೆ
ಅವು ಕೂಗುವುದು ಮತ್ತದೇ ಕಾಕಾ ಗೂಗೂ
ಇಲ್ಲಿಯ ನಾಯಿಗಳಿಗೆ ಹೊಸ ಶಾಸ್ತ್ರ ಕಲಿಸಿದರೆ
ಅವು ಊಳಿಡುವುದು ಮತ್ತದೇ ಬೌಬೌ
ನವ ವೇಷ ಭೂಷಣಗಳೊಳಗೆ
ಅದೇ ಪಾಚಿಗಟ್ಟಿದ ಭೂತಬುದ್ಧಿ,

ಯಾವ ಹೊಸಗಾಳಿಗೂ ಮೈತೆರೆಯದ ಹಳಸಲು ಬಾವಿ ಇದು
ಯಾವ ಹೊಸ ಪ್ರಭಾವಗಳಿಗೂ ಪಕ್ಕಾಗದ ಮೋಟು ಮರವಿದು
ಯಾವ ಹೊಸ ಬೀಜವೂ ನಾಟದ ಕಗ್ಗಲ್ಲಿದು
ಇಲ್ಲಿಯವರೆಗೆ ವಿಧಿ ನಿಷೇಧಗಳ
ಋಣಮಾರ್ಗದಲ್ಲಿ ನಡೆದದ್ದಾಯಿತು
ಹುಲಿ ಹಲ್ಲು ಕಿತ್ತು ಆಕಳ ಮಾಡುವ ಯತ್ನ ನಡೆಯಿತು
ಆಡುವ ಬಾಲಕನ ಕೈಕಾಲು ಕಟ್ಟಿ ಮೂಲೆ ಹಿಡಿಸಿದ್ದಾಯಿತು
ಹರಿವ ನಾಲಗೆಯ ಕತ್ತರಿಸಿ, ಉರಿವಗ್ನಿಯ ಮೇಲೆ ತಣ್ಣೀರು
ಸುರುವಿ
ಕಡಿವ ಕತ್ತಿಯನು ಬಂಡೆಗೆ ಹೊಡೆದು ಮೊಂಡಾಗಿಸಿ
ಜೀವಚ್ಛವವಾದೆವು
ಭಕ್ತಿಯ ಬೋಳೆತನ, ಅಹಿಂಸೆಯ ಹೇಡಿತನ, ಸ್ವರ್ಗದ
ದುರ್ಮಾರ್ಗತನ,
ಬ್ರಹ್ಮಚರ್ಯದ ಭಾನಗಡಿತನ, ಯೋಗದ ಗಂಡುಜೋಗತಿತನ,
ಇವನ್ನೆಲ್ಲ ಇನ್ನಾದರೂ ಸಾಕು ಮಾಡೋಣ
ಚೆನ್ನಾಗಿ ಉಳುವ-ಬೆಳೆವ, ಚೆನ್ನಾಗಿ ಉಣ್ಣುವ-ಉಡುವ,
ಮೈತುಂಬ ಕೆಲಸ ತುಂಬಿ ಕಾಯ ಕಲ್ಲಾಗಿಸುವಾ,
ಮನ ತುಂಬ ಸೊಗವುಂಡು ಭಾವಪೂರ ಹರಿಸುವಾ,

ನಮ್ಮ ಬೆನ್ನಿಗಂಟಿದ ಹೊಟ್ಟೆ ತುಂಬಿಸಿ ತೇಗುವ,
ಕಣ್ತುಂಬ ನಿದ್ರಿಸಿ ಪುನರ್ಜನ್ಮವನಣಕಿಸುವ
ಇಹ ಸಾರ್ಥಕತೆಯ ಧನಮಾರ್ಗ ಹಿಡಿಯೋಣ
ಎಲ್ಲಿ ಬೇಡದು ಕೂಡದು ಬಾರದುಗಳು ಬಂಧಿಸವೋ
ಎಲ್ಲಿ ಬೇಕು ಮಾಡು ಕೂಡುನಲಿಯುವಿಕೆಗಳು
ತಂತಾವೇ ಆಳುವುವೋ
ಹಾಗೆಯೇ ಬಾಳೋಣ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಚಂದ್ರನಿಗೊಂದು ಬುದ್ಧಿವಾದ

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

cheap jordans|wholesale air max|wholesale jordans|wholesale jewelry|wholesale jerseys